ತುಯ್ತವೆಲ್ಲ ನವ್ಯದತ್ತ
Original price was: ₹ 300.₹ 267Current price is: ₹ 267.
SYNOPSIS
ಈ ಪುಸ್ತಕದ ಹೆಸರು ‘ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ’ ಎಂದಷ್ಟೆ ಆಗದೆ, ʼಮತ್ತು ಅದರ ಸುತ್ತʼ ಅನ್ನುವ ಒಕ್ಕಣೆಯನ್ನೂ ತನ್ನಲ್ಲಿ ಸೇರಿಸಿಕೊಂಡಿದೆ. ಅಂದತ್ತರ ಉಯ್ಯಾಲೆಯ ಜೀಕು ಜೋರು-ಉದ್ದನೆಯದು: ಆಚೆಗೂ, ಈಚೆಗೂ. ಅದರಲ್ಲಿ ಕೂತು ಜೀಕಾಡಿದವನ ಮತ್ತವಿಲಾಸ ಈ ಪುಸ್ತಕ: ಆಗುತ್ತ ಆಗುತ್ತ ಒಂದು ವಿಷಯದಿಂದ ಮತ್ತೊಂದು ವಿಷಯದತ್ತ ತನ್ನಿಂತಾನೇ ಅನಿವಾರ್ಯ ಚಾಚಿ, ಹೊರಳಿಕೊಂಡು, ಬೆಳೆಯುತ್ತಹೋದ ಬರಹ. ಆ ನಿಧಾನ ಅನಾವರಣ, ಮತ್ತು ಹೊರಳುತಿರುವಿನ ಪಯಣದ ಕುರುಹುಗಳನ್ನು ಕೆಡಿಸದೆ, ಅವುಗಳನ್ನು ಅವಿರುವಂತೆಯೆ ಉಳಿಸಿಕೊಂಡು ಈ ಪುಸ್ತಕಕ್ಕೆ ಸಂಗತವಾದೊಂದು ಮೈಕಟ್ಟು ಕೊಡುವ ಪ್ರಯತ್ನಮಾಡಿದ್ದೇನೆ. ಹಾಗಾಗಿಯೆ, ಇದರಲ್ಲಿನ ಎರಡೂ ಮುಖ್ಯ ವಿಭಾಗಗಳನ್ನು ಲಹರಿಗಳು ಎಂದು ಕರೆದಿದ್ದೇನೆ. ಒಂದು ಆಸೆ: ಈ ಪುಸ್ತಕ ಕವಿಗಳಿಗೂ ನಚ್ಚುಗೆ ಆಗಲಿ. ನಿಜವಾದ ಕವಿಗಳು ಹೇಗೂ ಮತ್ತವಿಲಾಸಿಗಳು, ಸಂಕರಪ್ರಿಯರು; ತೊಂಡುಮೇವು, ಬೆರಕೆಸೊಪ್ಪಿನವರು ಅವರು; ಮಡಿವಂತಿಕೆ, ಬಿಗುಮಾನ ಎದುರಾದಾಗಲೆಲ್ಲ ರಂಗೋಲಿಯ ಕೆಳಗೆ ನುಸುಳುವವರು; ಅಲ್ಲಿ ಆಡಬೇಕಾದ ಆಟ ಆಡಿ, ಹೊಸದೇ ಹಸೆ ಬಿಡಿಸುವವರು! ಹಾಗೆ ನುಸುಳುವ, ಹಸೆ ಬಿಡಿಸುವ ಕೆಲಸ ಸುಲಭವಾದದ್ದಂತೂ ಅಲ್ಲ. ಆದರೆ, ಸಲೀಸು-ಸುಲಭವಾದ ಸಾಲುಗಳನ್ನು ಪೇರಿಸಿ, ಆ ಪೇರಿಕೆಯೇ ಕಾವ್ಯವೆಂದು ಭ್ರಮಿಸಿ, ತಮ್ಮ ತಾವು ಕವಿಗಳು ಎಂದು ಕರೆದುಕೊಂಡು, ಕರೆಸಿಕೊಳ್ಳುವವರು ಸಾಮಾನ್ಯವಾಗಿರುವ ಈ ದಿನಗಳಲ್ಲಿ, ಈ ಹೊತ್ತಿಗೆಯ ಕೆಲವಾದರೂ ಮಾತು ಕೆಲವರಿಗಾದರೂ ನಾಟಲಿ, ನಚ್ಚುಗೆ ಆಗಲಿ ಎಂದು ಆಶಿಸುತ್ತೇನೆ. ಅದೆಲ್ಲ ಆಗಬಹುದು, ಆಗದಿರಬಹುದು. ಆದರೆ ಕನ್ನಡ ಸಾಹಿತ್ಯ ಮತ್ತು ಕನ್ನಡ ಕಾವ್ಯದ ವಿದ್ಯಾರ್ಥಿಗಳಿಗೆ, ಅದರಲ್ಲೂ ವಿವಿಧ ದೇಶ, ಕಾಲಗಳ ಸಾಹಿತ್ಯಗಳನ್ನು ಓದುತ್ತ, ಅವುಗಳಲ್ಲಿನ ಒಂದನ್ನು ಮತ್ತೊಂದರ ಜೊತೆಗಿಟ್ಟು ಹೋಲಿಸಿ, ಪರಿಕಿಸಿ, ತೂಗಿನೋಡುವ ಆಸಕ್ತಿ ಇರುವವರಿಗೆ – comparative literature ಅಥವಾ literary studiesನವರಿಗೆ – ಈ ಬರಹದಿಂದ ಪ್ರಯೋಜನವಾಗುತ್ತದೆ ಎಂದು ಆಶಿಸುತ್ತೇನೆ. ಇದರಲ್ಲಿ ಪಶ್ಚಿಮದ, ನವ್ಯ modernist ಬರಹಗಾರರ ಉಲ್ಲೇಖವಿದೆ; ಟಿ. ಎಸ್. ಎಲಿಯಟ್ನ ಆಲೋಚನೆ ಮತ್ತು ಅವನ ಕಾವ್ಯ ಹಾಗೂ ವಿಮರ್ಶೆಯ ಬರಹಗಳ ಮೇಲೆ ದೊಡ್ಡ ಪ್ರಭಾವ ಬೀರಿದ ಜಾನ್ ಡನ್ ಮುಂತಾದ, ಆಗಲೇ ಹೇಳಿದ, ಇಂಗ್ಲಿಶ್ ಮೆಟಫಿಜಿಕಲ್ ಕವಿಗಳನ್ನು ಕುರಿತಾಗಿ ಒಂದು ಕಂಡಿಕೆಯಿದೆ. ಅದರಲ್ಲಿ ಆ ಕವಿಗಳ ಕಾವ್ಯವನ್ನು ದೀರ್ಘವಾಗಿ ಧೇನಿಸಿದೆ. ಅದಲ್ಲದೆ, ಮತ್ತೊಂದು ಕಂಡಿಕೆಯಲ್ಲಿ, ಆ ಕವಿಗಳ ಸಾಲಿಗೇ ಸೇರುವ ಹತ್ತೊಂಬತ್ತನೆಯ ಶತಮಾನದ ಕವಿ ಜೆರಾರ್ಡ್ ಮ್ಯಾನ್ಸಿ ಹಾನ್ಸ್ನ ಕಾವ್ಯವನ್ನು ಧೇನಿಸಿದೆ. ಹಾಗಾಗಿ ಈ ಮಾತು. ಬೇಂದ್ರೆಯವರ ಕಾವ್ಯವನ್ನು ಕುರಿತ ಪುಸ್ತಕದಲ್ಲಿ ಪಶ್ಚಿಮದ ಕವಿಗಳನ್ನು ಕುರಿತು ಇಷ್ಟೆಲ್ಲ ಉದ್ದ ಬರೆಯಬೇಕಿತ್ತೆ ಅನ್ನುವುದು ಇಲ್ಲಿ ಏಳಬಹುದಾದೊಂದು ಪ್ರಶ್ನೆ. ಆ ಪ್ರಶ್ನೆಗೆ, ಪಶ್ಚಿಮದ ಆ ಕವಿಗಳಮೇಲಿನ ಕಂಡಿಕೆಗಳಲ್ಲಿಯೆ ಸಮಾಧಾನವಿದೆ ಎಂದುಕೊಂಡಿದ್ದೇನೆ. ಅಲ್ಲದೆ, ಕಡೆಗೆ ಮುನ್ನ ಎಂಬಲ್ಲಿಯೂ ಅದಕ್ಕೆ ಉತ್ತರ ನೀಡುವ ಪ್ರಯತ್ನಮಾಡಿದ್ದೇನೆ. ಅಷ್ಟಾದರೂ ಕೆಲವು ಓದುಗರಿಗೆ ಸಮಾಧಾನ ಆಗದಿರಬಹುದು. ಪ್ರತಿಯೊಬ್ಬರನ್ನೂ ಸಮಾಧಾನಪಡಿಸಲಂತೂ ಆಗುವುದಿಲ್ಲವಲ್ಲ! -ರಘುನಂದನ (ಲೇಖಕರ ಮಾತಿನಿಂದ)
ABOUT AUTHOR
Opinion of Others
There are no others opinion yet.
Reviews
There are no reviews yet.